ಮರುಜೀವ

ಮನಸ್ಸಿಗೆ ಅನ್ನಿಸಿದ್ದನ್ನು ಗೀಚೋಣ ಅಂತ ಮಾತು-ಕಥೆ ಪ್ರಾರಂಭಿಸಿದೆ. ಅದೇನೋ? ಆರಂಭ-ಶೂರತ್ವವೆನ್ನಿ, ಸೋಮಾರಿತನವೆನ್ನಿ, ಇಂದು-ನಾಳೆ-ನಾಡಿದ್ದು ಹೀಗೆ ಬರೆಯಬೇಕೆನ್ನುವುದನ್ನ ಮುಂದಕ್ಕೆ ಹಾಕುತ್ತ ಹಾಕುತ್ತ ಮಾತು ಮೌನವಾಯಿತು, ಕಥೆ ಮರೀಚಿಕೆಯಾಯಿತು.

ಬಹಳ ದಿನಗಳ ನಂತರ ಮತ್ತೆ ಮೌನವಾದ ಮಾತುಗಳಿಗೆ ಮತ್ತೆ ಜೀವ ಕೊಡುವ ಪ್ರಯತ್ನ. ಏಪ್ರಿಲ್ ಮೂರ್ಖರನ್ನಾಗಿ ಮಾಡುತ್ತಿಲ್ಲ. ಬಹಳ ದಿನಗಳ ನಂತರ ಮಾತು ಶುರು ಮಾಡುತ್ತಿರುವುದರಿಂದ ಪದಗಳು ಸಲೀಸಾಗಿ ಹೊರಕ್ಕೆ ಬರುತ್ತಿಲ್ಲ. ಕೈಗಳು ಕೀಲಿಮಣೆಯ ಮೇಲೆ ಅಲ್ಲಲ್ಲೆ ನಿಲ್ಲುತ್ತಿದೆ. ಸದ್ಯಕ್ಕೆ ಇಷ್ಟು ಸಾಕು. ಅಲ್ಲಿಯತನಕ ಈ ತಿಂಗಳ ಡೆಸ್ಕ್-ಟಾಪ್ ಕ್ಯಾಲೆಂಡರ್ ಇಲ್ಲಿದೆ, ನಿಮ್ಮ ಕಂಪ್ಯೂಟರ್ ಪರದೆಗೆ.

ಗಂಟಲು ಸರಿಮಾಡಿಕೊಂಡು, ಮೈ ಕೊಡವಿ, ಮತ್ತೆ ಬರುವೆ :)

Posted by Prashanth M 10:51 PM 0 ಅನಿಸಿಕೆಗಳು  



ಹದಿನಾರರ ಆ ಸಂಜೆ...

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,

Posted by Prashanth M 9:25 AM 0 ಅನಿಸಿಕೆಗಳು